ಶ್ರವಣಬೆಳಗೊಳ, ಏಪ್ರಿಲ್ ೪, ೨೦೧೬: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಜನಕಲ್ಯಾಣ ಯೋಜನೆಯಡಿ ರೂಪಿಸಿರುವ ಉಚಿತ ಕೃತಕ ಕಾಲುಗಳ ಜೋಡಣೆ ಕಾರ‍್ಯವನ್ನು ದೀಪಾವಳಿವರೆಗೆ ವಿಸ್ತರಿಸಲಾಗುವುದೆಂದು ಶ್ರೀಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕಾಲು ಜೋಡಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಎಲ್ಲ ಪ್ರಜೆಗಳ ಕ್ಷೇಮವನ್ನು ಬಯಸುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕೆಂದರು. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೀವನ ಪದ್ಧತಿಯನ್ನು ಇದಕ್ಕೆ ಪೂರಕವಾಗಿ ಬದಲಾಯಿಸಿಕೊಳ್ಳಬೇಕು. ಮತ್ತೊಬ್ಬರ ಸಂಕಷ್ಟದಲ್ಲಿ ಭಾಗಿಯಾಗುವುದೇ ಧರ್ಮದ ಮೂಲ ತತ್ತ್ವವಾಗಿದೆ. ಹಲವು ಕಾರಣಗಳಿಂದ ಕಾಲುಗಳನ್ನು ಕಳೆದುಕೊಂಡವರಿಗೆ ಸಹಾಯಹಸ್ತ ನೀಡಿದ್ದು, ರಸ್ತೆಯಲ್ಲಿ ವಾಹನಗಳ ಚಲಾವಣೆ ಮಾಡುವಾಗ ಅತ್ಯಂತ ಎಚ್ಚರಿಕೆಯಿಂದಿರಬೇಕು. ಮತ್ತೊಬ್ಬರ ದುಃಖಕ್ಕೆ ಸ್ಪಂದಿಸುವುದು ಮಾನವನ ಕರುಣಾಭಾವವಾಗಿದೆ ಎಂದರು. ಆಚಾರ್ಯ ಚಂದ್ರಪ್ರಭ ಸಾಗರ ಮಹಾರಾಜರು ಮಾತನಾಡಿ, ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಹೆಚ್ಚಿನ ಮಹತ್ವ ಬಂದಿದೆ. ಮಹಾ ಪುರುಷರು ಜನಿಸಿದ ಈ ನಾಡಿನಲ್ಲಿ ವಿವಿಧ ಸಂಸ್ಕೃತಿ, ಧರ್ಮಗಳ ಜನರು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿರುವುದು ನಮ್ಮ ದೇಶದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಸಾಗಿರುವ ಚಾರುಕೀರ್ತಿಭಟ್ಟಾರಕರು ಅಹಿಂಸಾ ಸಾರಥಿಯಾಗಿದ್ದಾರೆಂದರು.

ಶಿಬಿರದ ಪ್ರಾಯೋಜಕತ್ವ ವಹಿಸಿದ್ದ ಬೆಂಗಳೂರಿನ ಸಿ.ಬಿ.ಭಂಡಾರಿ ಪರಿವಾರದ ಕರ್ನಾಟಕ ಮಾರ್ವಾಡಿ ಯೂತ್‌ ಫೆಡರೇಷನ್‌ನ ಬಿ.ಚಂಪಲಾಲ್‌ ಭಂಡಾರಿ ಮಾತನಾಡಿ, ಮೂರು ದಿನದ ಶಿಬಿರದಲ್ಲಿ 62 ಜನರಿಗೆ ಕೃತಕ ಕಾಲುಗಳನ್ನು ಜೋಡಿಸಿದ್ದು, ಅವರಲ್ಲಿ ಮಾತೃಭೂಮಿ ವೃದ್ಧಾಶ್ರಮದ ಎರಡು ಕಾಲಿಲ್ಲದ ಅನಾಥ ವೃದ್ಧೆಗೆ ಕೃತಕ ಕಾಲು ಜೋಡಿಸಿದ್ದು, ವಿಶೇಷವಾಗಿದೆ ಎಂದರು. ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್‌.ಯುವರಾಜ್‌ ಮಾತನಾಡಿದರು. ಶಿಬಿರದ ನೇತೃತ್ವ ವಹಿಸಿದ್ದ ಬೆಂಗಳೂರಿನ ಕೆಎಂಯುಎಫ್‌ನ ಚೀಫ್‌ ಟೆಕ್ನೀಷಿಯನ್‌ ಮುರುಳಿ, ಸಹಾಯಕರಾದ ಗಣೇಶ್‌, ನಾಗರಾಜ್‌, ಜಯಗೋಪಾಲ್‌ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಬಾಲಯೋಗಿ ಮುನಿಶ್ರೀ ಗಿರ್‌ನಾರ್‌ಸಾಗರ್‌ ಮಹಾರಾಜ್‌, ಮುನಿಶ್ರೀ ಪಾವನಕೀರ್ತಿ ಮಹಾರಾಜರು, ಮುನಿಶ್ರೀ ಜ್ಞಾನಭೂಷಣ ಮಹಾರಾಜರು, ಆರ್ಯಿಕಾಶ್ರೀ ಕುಂದಶ್ರೀ ಮಾತಾಜಿ, ಆರ್ಯಿಕಾಶ್ರೀ ಸುಪ್ರಭಾಮತಿ ಮಾತಾಜಿ, ಆರ್ಯಿಕಾಶ್ರೀ ಶಿವಮತಿ ಮಾತಾಜಿ, ಬಾಹುಬಲಿ ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಡಿ.ಪ್ರಭಾಮಂಡಲ್‌, ಡಾ.ಓಂಕಾರಪ್ಪ, ಡಾ.ಕಾವ್ಯಶ್ರೀ ಇದ್ದರು. – ಸುದ್ದಿ ಕೃಪೆ: ವಿಜಯ ಕರ್ನಾಟಕ