ಶ್ರವಣಬೆಳಗೊಳ, ಏಪ್ರಿಲ್ ೨, ೨೦೧೬: ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರೀಕ್ಷೇತ್ರವು ಉಚಿತವಾಗಿ ಕೃತಕ ಕಾಲು ಜೋಡಣೆ ಶಿಬಿರ ಹಮ್ಮಿಕೊಂಡಿದ್ದು, ಈಗಾಗಲೇ 65 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ನೋಂದಾಯಿತಿ ಅಂಗವಿಕಲರಿಗೆ ಭಾನುವಾರ ನಡೆಯಲಿರುವ ಶಿಬಿರಲ್ಲಿ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡಲು ಶ್ರವಣಬೆಳಗೊಳದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಲ್ಬುರ್ಗಿ, ಮಂಡ್ಯ, ಮೈಸೂರು, ಕೆ.ಆರ್‌.ನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಂಗ ವಿಕಲರು ಶ್ರವಣಬೆಳಗೊಳಕ್ಕೆ ಆಗಮಿಸಿದ್ದು ಎಲ್ಲರಿಗೂ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದ ಕಲ್ಪಿಸಲಾಗಿದೆ. ಬೆಂಗಳೂರಿನ ಸಿ.ಬಿ.ಭಂಡಾರಿ ಪರಿವಾರ ಮತ್ತು ಮಾರ್ವಾಡಿ ಯುವಕ ಸಂಘವು ಇದರ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತಿದ್ದು ಬೆಂಗಳೂರಿನಲ್ಲಿರುವ ನಿರ್ಮಾಣ ಕೇಂದ್ರವನ್ನು ಶ್ರವಣಬೆಳಗೊಳಕ್ಕೆ ವರ್ಗಾವಣೆ ಮಾಡಿದ್ದಾರೆ.

ಸಕ್ಕರೆ ಕಾಯಿಲೆ: ಪ್ರಸ್ತುತ ಹೆಸರು ನೊಂದಾವಣೆ ಮಾಡಿಕೊಂಡಿರುವವರ ಪೈಕಿ ಬಹುತೇಕ ಮಂದಿ ಸಕ್ಕರೆ ಕಾಯಿಲೆಯಿಂದ ಕಾಲು ಕಳೆದುಕೊಂಡಿರುವವರೇ ಆಗಿದ್ದಾರೆ. ಎರಡೂ ಕಾಲುಗಳನ್ನು ಕಳೆದುಕೊಂಡಿರುವವರು ಇಬ್ಬರು ಇದ್ದು, 6 ಮಂದಿ ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ವಯೋಮಿತಿಯ ಬೇಧವಿಲ್ಲದೆ 82ರ ವಯಸ್ಸಿನವರೂ ತಾವು ನಡೆದಾಡಬೇಕೆಂದು ಬಯಸಿ ಬಂದಿರುವುದು ಶಿಬಿರದ ಸಾರ್ಥಕತೆಯನ್ನು ತೋರಿಸುತ್ತದೆ.

ಪ್ರತಿಯೊಬ್ಬ ಫಲಾನುಭವಿಗಳು ಕಾಲಿನ ಅಳತೆ ತೆಗೆದುಕೊಂಡು ಕೃತಕ ಕಾಲುಗಳನ್ನು ನಿರ್ಮಾಣ ಮಾಡುತ್ತಿದ್ದು ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಮಿತಿಯೇ ಭರಿಸುತ್ತಿದೆ. ಈಗ ನೀಡಿರುವ ಕೃತಕ ಕಾಲುಗಳ ಆಯಸ್ಸು ಐದಾರು ವರ್ಷಗಳಾಗಿದ್ದು ಅವು ಹಾಳಾದರೆ ಪುನಃ ಉಚಿತವಾಗಿ ಪಡೆಯಬಹುದಾಗಿದೆ ಎನ್ನುತ್ತಾರೆ ಇದರ ಉಸ್ತುವಾರಿ ವಹಿಸಿಕೊಂಡಿರುವ ಮುರಳಿ.

* ಶ್ರವಣಬೆಳಗೊಳದಲ್ಲಿ ನಾಲ್ಕನೇ ಬಾರಿಗೆ ಕೃತಕ ಕಾಲುಗಳ ಜೋಡಣಾ ಶಿಬಿರ ನಡೆಸಲಾಗುತ್ತಿದೆ. 1983 ರಲ್ಲಿ ಆರಂಭವಾದ ಈ ಕಾರ‍್ಯ ಇದುವರೆಗೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿಯ ತನಕ 56 ಸಾವಿರ ಮಂದಿಗೆ ಕೃತಕ ಕಾಲುಗಳನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಶಾಶ್ವತ ಕೇಂದ್ರವಿದ್ದು ಅಲ್ಲಿಗೆ ಬರುವ ಎಲ್ಲರಿಗೂ ಉಚಿತವಾಗಿ ನೀಡಲಾಗುವುದು. ವಿವರಣೆಗೆ 9880890565 ಸಂಪರ್ಕಿಸಬಹುದು.

– ಮುರಳಿ. ವ್ಯವಸ್ಥಾಪಕರು.

* ಶ್ರವಣಬೆಳಗೊಳ ಧಾರ್ಮಿಕ ಕೇಂದ್ರವಾದರೂ ಕೇವಲ ದೇವರ ಪೂಜೆ, ಪುನಸ್ಕಾರಗಳಿಗಷ್ಟೇ ಸೀಮಿತವಾಗದೆ ದೇವರು ಹೇಳಿದಂತೆ ಮಾಡುವ ನಿಟ್ಟಿನಲ್ಲೂ ಶ್ರೀಮಠ ಕಾರ್ಯೋನ್ಮುಖವಾಗಿದೆ. ಕಳೆದ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭಗಳಲ್ಲಿ ಉಚಿತ ನೇತ್ರಚಿಕಿತ್ಸಾ ಶಿಬಿರದಿಂದ ಬಾಹುಬಲಿಯ ಮಹಾಮಜ್ಜನದ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಜನಸೇವೆಯೇ ಜನಾರ್ಧನ ಸೇವೆ ಎನ್ನುವಂತೆ ಇಂತಹ ಕಾರ‍್ಯದಲ್ಲೇ ದೇವರನ್ನು ಕಾಣಬಹುದಾಗಿದೆ.

– ಚಾರುಕೀರ್ತಿಭಟ್ಟಾರಕಸ್ವಾಮೀಜಿ. ಪೀಠಾಧ್ಯಕ್ಷ ರು. ಶ್ರೀಕ್ಷೇತ್ರ ಶ್ರವಣಬೆಳಗೊಳ.

– ಸುದ್ದಿ ಕೃಪೆ: ವಿಜಯಕರ್ನಾಟಕ