Pooja for carving another row of steps for Vindhyagiri Hillock at Shravanabelagola.

ಶ್ರವಣಬೆಳಗೊಳ (ಹಾಸನ ಜಿಲ್ಲೆ), ಫೆಬ್ರವರಿ ೯, ೨೦೧೭: ಜೈನರ ಪವಿತ್ರ ಯಾತ್ರಾಸ್ಥಳ ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿಗೆ 2018ರ ಫೆಬ್ರವರಿಯಲ್ಲಿ ಮಹಾ ಮಸ್ತಕಾಭಿಷೇಕ ನಡೆಯುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಸಂರಕ್ಷಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನಡೆಯಿತು.

ಬಾಹುಬಲಿ ಮೂರ್ತಿ ಇರುವ ವಿಂಧ್ಯಗಿರಿ ಪರ್ವತಕ್ಕೆ ಭಕ್ತರು, ಯಾತ್ರಾರ್ಥಿಗಳು ಸರಾಗವಾಗಿ ಹತ್ತಿ-ಇಳಿಯಲು ಪ್ರತ್ಯೇಕವಾಗಿ 400 ಮೆಟ್ಟಿಲುಗಳನ್ನು ಕಡೆಯುವ ಕಾರ್ಯಕ್ಕೆ ಶ್ರೀಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬೆಟ್ಟದ ಪಾದದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ದೇಶ-ವಿದೇಶಗಳಿಂದ ಕ್ಷೇತ್ರಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಕೇಂದ್ರ ಮತ್ತು ರಾಜ್ಯಸರ್ಕಾರ, ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಕರ್ತವ್ಯ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದಕ್ಕೆಲ್ಲ ಹಂತ ಹಂತವಾಗಿ ಪರಿಹಾರ ಸಿಗುತ್ತಿದೆ ಎಂದರು.

ಸಂಸಾರದಲ್ಲಿ ವೈರಾಗ್ಯ ತಳೆದ ಮುನಿಗಳು ಅಂದು ಬೆಟ್ಟ-ಗುಡ್ಡಗಳ ಗುಹೆಗಳಲ್ಲಿ ತಪಸ್ಸು ಮಾಡುತ್ತಿದ್ದರು. ಮಹಾವೀರ ಪರಂಪರೆಯಲ್ಲಿ 8ನೇ ತೀರ್ಥಂಕರರಾದ ಭದ್ರಬಾಹು ಕಾಲಿಟ್ಟ ಪುಣ್ಯಭೂಮಿ ಶ್ರವಣಬೆಳಗೊಳ. ಹಿಂದೆ 12 ಸಾವಿರಕ್ಕೂ ಹೆಚ್ಚು ಜಿನ ಮುನಿಗಳಿದ್ದರು. ಇಂದು ಪ್ರಪಂಚದ ಜನಸಂಖ್ಯೆ 700 ಕೋಟಿ ದಾಟಿದೆ. ಆದರೆ, ಇಂದು ಜಿನ ಮುನಿಗಳ ಸಂಖ್ಯೆ 700ಕ್ಕೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

1981ರ ಮಾರ್ಚ್‌ 13ರಂದು ಬಾಹುಬಲಿ ಮೂರ್ತಿಗೆ ಪ್ರಥಮ ಮಹಾ ಮಸ್ತಕಾಭಿಷೇಕ ನಡೆಸಲಾಗಿತ್ತು. 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಎಲ್ಲ ರೀತಿಯ ಸಿದ್ಧತೆಗಳೂ ಭರದಿಂದ ನಡೆಯುತ್ತಿದೆ. ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ವಿವಿಧ ಕೆಲಸಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 575 ಕೋಟಿ ರೂ. ಮಂಜೂರಾತಿ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ 5 ಕೋಟಿ ರೂ. ಅನ್ನು ರಾಜ್ಯಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಬಾಹುಬಲಿ ಮೂರ್ತಿ ರಾಷ್ಟ್ರೀಯ ಸ್ಮಾರಕವಾಗಿರು ವುದರಿಂದ ಕೇಂದ್ರ ಸರ್ಕಾರದಿಂದ ಕೂಡ ನೆರವು ದೊರೆಯಬೇಕಿದೆ. ಕಳೆದ ಮಹಾಮಸ್ತಕಾಭಿಷೇಕದ ವೇಳೆ ಕೇಂದ್ರ ಸರ್ಕಾರ 32 ಕೋಟಿ ರೂ. ನೀಡಿತ್ತು ಎಂದ ಅವರು, ಈ ಸಂಬಂಧ ಕೇಂದ್ರ ಸಚಿವ ಮಹೇಶ್‌ ಶರ್ಮಾ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದರು.

ಮಹಾ ಮಸ್ತಕಾಭಿಷೇಕ ರಾಷ್ಟ್ರದ ಸಾಂಸ್ಕೃತಿಕ ವೈ¸‌ವದ ಸಂಕೇತ. ಶ್ರವಣಬೆಳಗೊಳ ಕ್ಷೇತ್ರ ಸರ್ಕಾರದ ಗಮನ ಸೆಳೆಯುವುದೂ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿಯೇ. ಹೀಗಾಗಿ ಈ ಸಂದರ್ಭದಲ್ಲೇ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಡಿಸೆಂಬರ್‌ ತಿಂಗಳ ನಂತರ ನಿತ್ಯ 15,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದ ಅವರು, ಹಿಂದೆ ರಾಜರ ಆಳ್ವಿಕೆಯಲ್ಲಿ ಕ್ಷೇತ್ರಕ್ಕೆ ಸುತ್ತಲಿನ 34 ಹಳ್ಳಿಗಳನ್ನು ದತ್ತಿ ನೀಡಲಾಗಿತ್ತು. ಭೂ ಸುಧಾರಣಾ ಕಾಯ್ದೆ ಬಂದ ನಂತರ ಶ್ರೀಕ್ಷೇತ್ರದ ಆಡಳಿತದಿಂದ ಹಳ್ಳಿಗಳು ಕೈತಪ್ಪಿ ಹೋಗಿರುವುದರಿಂದ ಎಲ್ಲದಕ್ಕೂ ಸರ್ಕಾರದತ್ತಲೇ ನೋಡಬೇಕಿದೆ ಎಂದರು.

ಈ ಬಾರಿಯ ಮಹಾ ಮಸ್ತಕಾಭಿಷೇಕಕ್ಕೆ 3 ಲಕ್ಷ ಯಾತ್ರಿಗಳು ಆಗಮಿಸುವ ನಿರೀಕ್ಷೆ ಇದೆ. ಸುಮಾರು 25,000 ಜನರ ವಸತಿಗೆ ತಾತ್ಕಾಲಿಕ ಟೆಂಟ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಕ್ಷೇತ್ರಕ್ಕೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಈ ವರ್ಷ ಶ್ರವಣಬೆಳಗೊಳ- ಬೆಂಗಳೂರು ನಡುವೆ ರೈಲು ಸಂಚರಿಸುವ ವಿಶ್ವಾಸವಿದೆ ಎಂದು ಹೇಳಿದರು.

200 ಹಾಸಿಗೆಗಳ ಆಸ್ಪತ್ರೆ: ಜನರ ಅನುಕೂಲಕ್ಕಾಗಿ ಶ್ರೀಕ್ಷೇತ್ರದ ವತಿಯಿಂದಲೇ 200 ಹಾಸಿಗೆಗಳ ಸಾಮ ರ್ಥ್ಯದ ಆಸ್ಪತ್ರೆ ನಿರ್ಮಿಸುವ ಉದ್ದೇಶವಿದೆ ಎಂದರು.
ಮಹಾ ಮಸ್ತಕಾಭಿಷೇಕ ಸಮಿತಿ ಅಧ್ಯಕ್ಷರಾದ ಸವಿತಾ ಮಹೇಂದ್ರಕುಮಾರ್‌ ಜೈನ್‌, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಬೆಂಗಳೂರು ವೃತ್ತದ ಅಧೀಕ್ಷಕ ಅರುಣ್‌ ರಾಜ್‌ ಮೊದಲಾದವರು ಉಪಸ್ಥಿತರಿದ್ದರು.

ಮೆಟ್ಟಿಲುಗಳ ವಿಸ್ತರಣೆ
ವಿಂಧ್ಯಗಿರಿ ಬೆಟ್ಟಕ್ಕೆ ಪ್ರತ್ಯೇಕವಾಗಿ 400 ಮೆಟ್ಟಿಲುಗಳನ್ನು ಕಡೆದು ಭಕ್ತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಬೆಂಗಳೂರು ವೃತ್ತದ ಅಧೀಕ್ಷಕ ಅರುಣ್‌ ರಾಜ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಟ್ಟಕ್ಕೆ ಹತ್ತಲು ಮತ್ತು ಇಳಿಯಲು ಪ್ರತ್ಯೇಕ ಮೆಟ್ಟಿಲುಗಳಿದ್ದರೂ ಡೋಲಿಗಳು ಹೋಗುವಾಗ ಅಡಚಣೆಯಾಗುತ್ತಿದೆ. ಹೀಗಾಗಿ ಮೆಟ್ಟಿಲುಗಳ ವಿಸ್ತರಣೆಗೆ ಪ್ರಸ್ತಾವನೆ ಇತ್ತು. ಆದರೆ, ಇರುವ ಮೆಟ್ಟಲುಗಳನ್ನು ಅಗಲ ಮಾಡುವುದರಿಂದ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹೊಸದಾಗಿಯೇ ಪ್ರತ್ಯೇಕ ಮೆಟ್ಟಿಲುಗಳನ್ನು ನಿರ್ಮಿಸಲು ತೀರ್ಮಾನ ಮಾಡಲಾಯಿತು ಎಂದರು.

ಬೆಟ್ಟದ ಮೇಲೂ ಸಾಕಷ್ಟು ಕೆಲಸ ಆಗಬೇಕಿದೆ. ಬೆಟ್ಟದ ಸುತ್ತಲಿನ ತಂತಿಬೇಲಿಯ ಜೀರ್ಣೋದ್ಧಾರ ಆಗಬೇಕಿದ್ದು, ಇದಕ್ಕಾಗಿ 42 ಲಕ್ಷ ರೂ. ಮಂಜೂರಾಗಿದೆ ಎಂದರು. 400 ಮೆಟ್ಟಿಲು ಮತ್ತು ಕೈ ಹಿಡಿಕೆ ನಿರ್ಮಾಣ ಕಾಮಗಾರಿಗೆ ಈ ಹಣಕಾಸು ವರ್ಷದಲ್ಲಿ 40 ಲಕ್ಷ ರೂ. ನೀಡಲಾಗಿದ್ದು, ಕಾಮಗಾರಿಯನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಹೇಳಿದರು. – ಕೃಪೆ: ಉದಯವಾಣಿ